ವಿಶಿಷ್ಟತೆ ಮೆರೆದ ತುಳುನಾಡಿನ ಜಾನಪದ ಕ್ರೀಡಾಕೂಟ
ಉಡುಪಿ, ಜು.18: ಅಲೆವೂರಿನ ನೈಲಪಾದೆ ಕಂಬಳಗದ್ದೆಯಲ್ಲಿ ರವಿವಾರ ಏರ್ಪಡಿಸಲಾದ ತುಳುನಾಡಿನ ವೈಭವ ವನ್ನು ಬಿಂಬಿಸುವ ಜಾನಪದ ಕ್ರೀಡಾ ಕೂಟ ವಿಶಿಷ್ಟವಾಗಿ ಮೂಡಿಬಂತು.
ಆಧುನಿಕತೆ, ಕಂಪ್ಯೂಟರ್ ಗೇಮ್ಸ್, ಕ್ರಿಕೆಟ್ ಪ್ರಭಾವಕ್ಕೆ ಒಳಗಾಗಿ ಮರೆೆ ಯಾಗಿರುವ ತುಳುನಾಡಿನ ಪ್ರಾಚೀನ ಜಾನಪದ ಕ್ರೀಡೆಗಳನ್ನು ಉಳಿಸಿ, ಯುವ ಜನತೆಯನ್ನು ಅದರತ್ತ ಆಕರ್ಷಿಸುವ ನಿಟ್ಟಿನಲ್ಲಿ ಅಲೆವೂರು ಗುಡ್ಡೆಅಂಗಡಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಳೆದ ನಾಲ್ಕು ವರ್ಷಗಳಿಂದ ಈ ಕೆಸರುಗದ್ದೆ ಆಟೋಟ ಸ್ಪರ್ಧೆಯನ್ನು ಹಮ್ಮಿಕೊಳ್ಳುತ್ತಿದೆ. ಮಣ್ಣಿನ ಮಕ್ಕಳನ್ನು ಒಗ್ಗೂಡಿಸಿ ಕೃಷಿ ಹಾಗೂ ಜಾನಪದ ಕ್ರೀಡೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶ ಈ ಕ್ರೀಡಾಕೂಟದ ಹಿಂದೆ ಇದೆ. ಅಲೆವೂರಿನ ಗ್ರಾಮಸ್ಥರಿಗಾಗಿಯೇ ಆಯೋಜಿಸಲಾದ ಕೆಸರುಗದ್ದೆ ಓಟ, ವಾಲಿಬಾಲ್, ಹಗ್ಗಜಗ್ಗಾಟ, ತೆಪ್ಪಂಗಾಯಿ ಸ್ಪರ್ಧೆಯಲ್ಲಿ ನೂರಾರು ಮಂದಿ ಸ್ಪರ್ಧಿಗಳು ಅತಿ ಉತ್ಸಾಹ ದಿಂದಲೇ ಪಾಲ್ಗೊಂಡರು.
ಸುರಿಯುತ್ತಿರುವ ಮಳೆಯ ನಡುವೆಯೇ ಸ್ಪರ್ಧಿಗಳು ಕೆಸರಲ್ಲಿ ಓಡಿ, ಬಿದ್ದು, ಸಂಭ್ರಮಪಟ್ಟರು. ಗೆಲುವಿನ ಸಂಭ್ರಮವನ್ನು ತುಳು ಪಾಡ್ದನ, ಜಾನಪದ ಹಾಡುಗಳಿಗೆ ಹೆಜ್ಜೆಹಾಕಿ ಕುಣಿದು ಅನುಭವಿಸಿದರು. ಗ್ರಾಮದ ಮಕ್ಕಳು, ಯುವಕರು, ಮಹಿಳೆಯರು, ಹಿರಿಯರೆಲ್ಲರು ಇದರಲ್ಲಿ ಭಾಗಿಗಳಾಗಿ ಗ್ರಾಮೀಣ ಕ್ರೀಡೆಯನ್ನು ಜೀವಂತವಾಗಿಸಲು ಕೈಜೋಡಿಸಿದರು.
ಕ್ರೀಡಾಕೂಟದಲ್ಲಿ ಅಲೆವೂರು ಗ್ರಾ.ಪಂ. ಅಧ್ಯಕ್ಷ ಹರೀಶ್ ಕಿಣಿ ಹಾಗೂ ಇತರ ಸದಸ್ಯರು ಪಾಲ್ಗೊಂಡು ಎಲ್ಲರ ಗಮನ ಸೆಳೆದರು.
ಈ ಎಲ್ಲ ಕ್ಷಣಗಳು ತುಳುನಾಡಿನ ವೈಭವವನ್ನು ಮತ್ತೆ ಮೆಲುಕು ಹಾಕಿಸುತ್ತಿದ್ದವು. ಸ್ಪರ್ಧೆಯ ವಿಜೇತರಿಗೆ ನಗದು ಬಹುಮಾನಗಳನ್ನು ವಿತರಿಸ ಲಾಯಿತು. ಕ್ರೀಡಾ ಕೂಟದ ಬಳಿಕ ಎಲ್ಲರಿಗೂ ಗಂಜಿ ಹಾಗೂ ಚಟ್ನಿಯ ಭೋಜನ ನೀಡಲಾಯಿತು.